Thursday, March 20, 2008

ಬ್ಯಾಂಡ್‌ಸ್ಟ್ಯಾಂಡಿನ ಬಂಡೆಗಳು

ಯಶವಂತ ಚಿತ್ತಾಲ



[ಕನ್ನಡ]
ಲಬಸಾಗಳು


ಬಾಂದ್ರಾದಲ್ಲಿ ಬ್ಯಾಂಡ್‍ಸ್ಟ್ಯಾಂಡಿನ ಬಂಡೆಗಳು ಪ್ರಖ್ಯಾತ.
ಹಬ್ಬಿಕೊಂಡಿದೆ ನೆಲದ ಈ ತುದಿಯಿಂದ ಸಮುದ್ರ ದಂಡೆಗೆ ಹತ್ತ
ಕಣ್ಣು ಹಾಯುವ ಆ ತುದಿಯವರೆಗೂ. ಕಪ್ಪಗೆ ಗಟ್ಟಿ
ಕಬ್ಬಿಣದ ಹಾಗೆ. ಉಕ್ಕಿನಂಥಹ ಪಾಷಾಣದ ಕಲ್ಲು ಹಾಸಿಗೆ
ಹಾಸಿ ಮಲಬಿವೆ ತೆಪ್ಪಗೆ ಉದ್ದೋ ಉದ್ದಕ್ಕೆ.

ಸಹಸ್ರಾರು ವರ್ಷಗಳ ಹಿಂದೆ ಎದ್ದು ಬಂದುವಂತೆ
ಭೂಗರ್ಭದ ಆಳದಿಂದ. ನಿಗಿ ನಿಗಿ ಉರಿಯುವ ಕುಂಡದಿಂದ.
ಬರುವಾಗಲೇ ಬೆಂಕಿಯ ಉಂಡೆಗಳಾಗಿ, ಹೊತ್ತು ಸಿಡಿಯುವ
ಕೆಂಡಗಳಾಗಿ. ಮುಂದೆ ಬಹಳ ಮುಂದೆ ಬಂಡೆಗಳಾಗಿ ತಣ್ಣಗಾದುವಂತೆ

ಕಂಡವರಿಲ್ಲ ಯಾರೂ ಈ ತಣ್ಣಗಾಗುವ, ಅಗ್ನಿಶಿಖೆ
ಶಿಲೆಯಾಗಿ ಆರುವ ನಿಗೂಢ ಪ್ರಕ್ರಿಯೆಯನ್ನು
ಕಂಡವ ಹಾಗೇ ಹೇಳುತ್ತಾರೆ. ಅಳೆಯುತ್ತಾರೆ ಕೂಡ ಈ
ಇಳಾಸಂತತಿಯ ಹೆರೆಯವನ್ನು, ಜನ್ಮ ಕೊಟ್ಟವಳದೇ
ಜನ್ಮ ತಾರೀಖನ್ನು ಅಳೆದೇ ಕಂಡುಹಿಡಿಯುವ ನಿಷ್ಣಾತರು! ಬರೇ
ಕಲ್ಲಲ್ಲವಂತೆ: ಕಾಲಾಂತರದಲ್ಲಿ ಗಟ್ಟಿ ಹೆಪ್ಪುಗಟ್ಟಿದ ಕಾಲ
ಪ್ರವಾಹದ್ದೇ ತೊರೆ, ಬಂಡೆಯೆಂದರೆ!




ಕಂಡವರೂ ಇದ್ದರಂತಲ್ಲ ಕಲ್ಲಿನಲಿ ದೇವರ ರೂಪವನ್ನು?
ವಿಶ್ವದ ಭವ್ಯ ರೂಪವನ್ನು ಕಲ್ಪಿಸಿಯೇ ಮೈಮರೆತ
ಅದ್ಭುತರು, ಒಂದಾನೊಂದು ಕಾಲದಲ್ಲಿ?

ಶಿವನಾತ್ಮಲಿಂಗ, ಚತುರ್ಭುಜ ವಿಷ್ಣು, ಧ್ಯಾನ ನಿಮಗ್ನ ಗೌತಮ ಬುದ್ಧ,
ಆಕಾಶದೆತ್ತರಕೆ ಬರಿ ಮೈಯಲ್ಲಿ ತಲೆಯೆತ್ತಿ ನಿಂತ ಗೊಮ್ಮಟೇಶ್ವರ
ಲಕ್ಷೋಪಲಕ್ಷ ಇಂಥ ದಿವ್ಯ ಚೇತನರನ್ನು ಶಿಲೆಯಿಂದ ಬಿಡಿಸಿ
ಬೆಳಕಿಗೆ ತಂದು ಉಸಿರಿತ್ತ ಪುರಾತನರು!
ಎಲ್ಲಿ ಮಾಯವಾದರೋ ಯಾವ ಕಾಲದ ಎಂಥ ಕತ್ತಲಮರೆಗೆ! ದಿಕ್ಕಾ
ಪಾಲಾದರೋ ವಲಸೆ ಹೋಗಿ ಯಾವ ಕಾಣದ ನಾಡಿಗೆ? ಯಾವ ಕಾರಣಕೆ?
ಕಂಡವರಿಲ್ಲ. ಉಸಿರೆತ್ತುವ ಸ್ಥಿತಿಯಲ್ಲಿಲ್ಲ ಉಸಿರು ಪಡೆದವರೇ
ಕಲ್ಲು ಮೂರ್ತಿಯ ಹಾಗೆ ನಿಂತು ಬಿಟ್ಟಿದ್ದಾರೆ ಗಟ್ಟಿ ಅವುಡುಗಚ್ಚಿ


ಬ್ಯಾಂಡ್‌ಸ್ಟ್ಯಾಂಡಿನಲ್ಲೀಗ ಬರೇ ಎಣಿಸುವವರೇ ಹೆಚ್ಚು
ಕಂಡ್ಡದ್ದರಲ್ಲಿ ಕೈ ಹಚ್ಚಿದ್ದರಲ್ಲಿ ಅಂಕೆ ಹುಡುಕುವ ಹುಚ್ಚು
ಲಕ್ಷ ದಶಲಕ್ಷಗಳ ಮಗ್ಗಿಯೆಂದೋ ಮುಗಿಸಿ ಮನದ
ಪಾಟಿಯ ಮೇಲೆ ಕೋಟಿ ಅಬ್ಜಗಳ ಸಂಖ್ಯೆ ಗೀರುತ್ತಾರೆ
ಸಲೀಸಾಗಿ. ಕೈಬೆರಳಿನಲ್ಲೂ ಗುಣಿಸುತ್ತಾರೆ ಮೈಮರೆಯುತ್ತ
ಅಂಕೆಗಳೆದುರಿನ ಶೂನ್ಯ ಬೆಳೆವ ಪರಿಗೆ!

ತಾವೆ ಸೃಷ್ಟಿಸಿದ ಈ ಪೆಡಂಭೂತಕ್ಕೆ ಸಂಕೇತಕ್ಕೆ
ಕಲ್ಲನೂ ಮಣಿಸಿ ಸಂಖ್ಯೆಯಾಗಿಸುವ ಮತಿ ಶೂನ್ಯ
ಹವ್ಯಾಸಕ್ಕೆ ಒಡೆಯುತ್ತಾರೆ. ಮೊಳ ಕಂತ ತೂತು ಕೊರೆದು
ಬಂಡೆಯಲ್ಲಿ ಮದ್ದು ಜಡೆಯುತ್ತಾರೆ. ಫರ್ಲಾಂಗು ಉದ್ದ ಬತ್ತಿಗೆ
ಬೆಂಕಿಯಿಕ್ಕಿ ಕಿವಿ ಮುಚ್ಚಿ ಅವಿತು ಕುಳಿತಲ್ಲೇ ಬಂಡೆಯ
ಮರೆಗೆ ಲೆಕ್ಕಾ ಹಾಕುತ್ತಾರೆ ನಮ್ಮ ಕಾಲದ ಶೂರರು.

ಸಮುದ್ರ ತೀರದಲಿಂದು ಬರೀ ಸೀಳಿ ಸಿಡಿಯುವ ಸದ್ದು
ನಿಸ್ಸಹಾಯ ಆರ್ಭಾಟ ಚೀರಾಟ ಚಕ್ಕಾಚೂರು ಕಲ್ಲೊಡೆದು
ಹವಾಮಾನದಲ್ಲೆಲ್ಲ ಮಸ್ತಕಕೆ ಮತ್ತು ಹಿಡಿಸುವ ವಾಸನೆ ದಾಹ
ಮುವ್ವತ್ತು ಮಜಲುಗಳ ಗಗನ ಚುಂಬೀ ಸೌಧ ಎದ್ದು ಬರುವ
ಸೌದಾಗಿರೀ ಪರಾಕ್ರಮಕ್ಕೆ ಭದ್ರ ಬುನಾದಿ ಸಿದ್ಧಗೊಳ್ಳುವುಅ
ರುದ್ರ ರಭಸಕ್ಕೆ ಪುರಾತನ ಉದ್ಭವ ಶಿಲೆ ಛಿದ್ರ ವಿಚ್ಛಿದ್ರ.
ಬ್ಯಾಂಡ್‌ಸ್ಟ್ಯಾಂಡಿನ ಬಂಡೆಗಳೀಗ ಈ ಕಾರಣಕ್ಕೇ ಪ್ರಸಿದ್ಧ!


[ಬ್ಯಾಂಡ್‌ಸ್ಟ್ಯಾಂಡ್: ಮುಂಬಯಿಯ ಬಂದ್ರಾದಲ್ಲಿ ಒಂದು ಜನವಸತಿ]

2 comments:

Keshav.Kulkarni said...

ಚಿತ್ತಾಲರ ಲಬಸಾಗಳ ಬಗ್ಗೆ ಓದಿದ್ದೆ. ಅವರ ಲಬಸಾ ಓದುವ ಅವಕಾಶ ಇನ್ನೂ ಸಿಕ್ಕಿಲ್ಲ. ನಿಮ್ಮಿಂದಾಗಿ ಅವರ ಒಂದು ಲಬಸಾ ಓದಲು ಸಿಕ್ಕಿತು. ತುಂಬ ಥ್ಯಾಂಕ್ಸ್!

ಅಡಿಗರ ಛಾಯೆ ಎದ್ದು ಕಾಣುತ್ತದೆ, ಚಿತ್ತಾಲರ ಕತೆಗಳ ಮೊದಲ ಪ್ಯಾರಾದಂತಿದೆ.

ಇಷ್ಟವಾಯಿತು.

-ಕೇಶವ

minicart said...

Good Article, Thanks to sharing
Buy Treadmill Online