ನನ್ನದಲ್ಲದ ಕವಿತೆ

ಎಂ.ಎಸ್.ಶ್ರೀರಾಮ್

ಬುದ್ಧಿವಂತರಿಗೆ ಕನಸು ಬಿದ್ದರೆ



ಎ.ಕೆ.ರಾಮಾನುಜನ್


[ಕನ್ನಡ]

ಪ್ರಾಚೀನ ಚೀನದಲ್ಲಿ ಬುದ್ಧಿವಂತ
ಒಬ್ಬನಿಗೆ ಪ್ರತಿರಾತ್ರಿ
ಕನಸು.

ಪ್ರತಿರಾತ್ರಿ ಮುಸುಂಬಿ-
ಬಣ್ಣದ ಚಿಟ್ಟೆಯಾಗಿ ನೈದಿಲೆಯಿಂದ
ಸೇವಂತಿಗೆ
ಸೇವಂತಿಯಿಂದ ನೈದಿಲೆಗೆ
ಹಾರಿ ಹಾರಿ ಗಾಳಿಯಲ್ಲಿ ತೇಲಿದ ಹಾಗೆ
ಕನಸು.

ಎಷ್ಟೋ ರಾತ್ರಿ ಚಿಟ್ಟೆಯಾಗಿ
ಕನಸು ಕಂಡು ಕಡೆಗೆ
ಮನುಷ್ಯನೋ
ಚಿಟ್ಟೆಯೋ
ರಾತ್ರಿಯ ಚಿಟ್ಟೆ
ಹಗಲು ಮನುಷ್ಯನ ಕನಸೋ
ಹಗಲು
ರಾತ್ರಿಯ ಕನಸೋ

ತಿಳಿಯದೆ ಭ್ರಮೆ ಹಿಡಿಯಿತು

Sunday, April 08, 2007

ಕವಿತಾವೇಶ



ಕೆ.ಪಿ.ಪೂರ್ಣಚಂದ್ರ ತೇಜಸ್ವಿ


[ಕನ್ನಡ]

"ಎದ್ದೇಳಿ ಎಚ್ಚರಗೊಳ್ಳಿ"
ಎಂದು ಸಂದಣಿಯಲ್ಲಿ ಅಬ್ಬರಿಸಿ ಕೂಗಿತೊಂದು ವಾಣಿ

"ಬೆಚ್ಚಿ ಬೀಳುವಿರೇನು ಪೆಚ್ಚುಗಳಿರಾ!
ಹತ್ತಿಪ್ಪತ್ತು ವರುಷ ಸುಪ್ಪತ್ತಿಗೆಯ ಮೇಲೆ
ಸರಸ ಸಲ್ಲಾಪದಲಿ ಕಳೆದುದ್ದಾಯ್ತು ಕಾಲ.
ಕವಿವ ಕಾಳರಾತ್ರಿಯ ಕೋಳ
ಕಾಣದೇ ಮರುಳ."

"ಉತ್ತರದ ಗಡಿಯ ನೆತ್ತರಿನ ಹೊನಲ
ಬಿತ್ತರದ ರಣಕಹಳೆ ಹೊಯ್ಲುಗಳ
ಕಂಡು ಕೇಳದ ನೀವು; ಕೀಟಗಳಿರಾ
ಎದ್ದೇಳಿ ಎಚ್ಚರಗೊಳ್ಳಿ"

ಎಂದಂದು ಬಾನುಲಿಯಲ್ಲಿ ಗಟ್ಟಿ
ಚೆಕ್ಕಿಗೊಂದು ರುಜು ಹೆಟ್ಟಿ
ಮಲಗಿದನು ಕವಿಯು
ಕಕ್ಕಾಬಿಕ್ಕಿಯಾಗಿ ರಾತ್ರಿಗೆ ಸರಿದಿತ್ತು ಬುವಿಯು.

Friday, April 06, 2007