Wednesday, September 27, 2006

ಆತ್ಮಹತ್ಯೆ

ಹಾರ್ಹೆ ಲೂಯಿ ಬೊರ್ಹೇಸ್
[ಸ್ಪಾನಿಶ್]

ರಾತ್ರೆಯಲ್ಲಿ ಒಂದು ನಕ್ಷತ್ರವೂ ಉಳಿದಿರುವುದಿಲ್ಲ.
ರಾತ್ರೆಯೇ ಉಳಿದಿರುವುದಿಲ್ಲ.
ನಾನು ಸಾಯುತ್ತೇನೆ, ನನ್ನ ಜೊತೆಗೇ
ಪಿರಮಿಡ್ಡುಗಳನ್ನು, ಪದಕಗಳನ್ನು,
ಭೂಖಂಡಗಳನ್ನು, ಚಹರೆಗಳನ್ನು ಅಳಿಸಿಹಾಕುವೆ.
ಪೇರಿಸಿಟ್ಟ ಭೂತವನ್ನು ಅಳಿಸಿಹಾಕುವೆ.
ಚರಿತ್ರೆಯನ್ನು ಧೂಳಾಗಿಸುತ್ತೇನೆ, ಧೂಳನ್ನೂ ಧೂಳಾಗಿಸುವೆ.
ನಾನು ಕಡೆಯ ಸೂರ್ಯಾಸ್ತವನ್ನು ನೋಡುತ್ತಿರುವೆ.
ಕಡೆಯ ಹಕ್ಕಿಯ ಕಲರವ ಕೇಳುತ್ತಿರುವೆ.
ನಾನು ಯಾರೂ ಅಲ್ಲದವರಿಗೆ ಏನೂ ಇಲ್ಲವಾದ್ದನ್ನು ಬಳುವಳಿಯಾಗಿ ನೀಡಿದ್ದೇನೆ.

Tuesday, September 26, 2006

ಬರ್ಬರರ ನಿರೀಕ್ಷೆಯಲ್ಲಿ

ಸಿ.ಪಿ.ಕ್ಯವಫಿ
[ಗ್ರೀಕ್]
ಅನುವಾದ: ಬಿ.ಆರ್.ಲಕ್ಷ್ಮಣರಾವ್

ಯಾರಗಾಗಿ ಕಾಯುತ್ತಿದ್ದೇವೆ ನಾವು
ಮಾರುಕಟ್ಟೆಯಲ್ಲಿ ಸೇರಿ?

ಬರಲಿದ್ದಾರೆ ಇಂದು ಬರ್ಬರು.

ಸತ್ತಂತಿದೆಯೇಕೆ ಸಂಸತ್ತು?
ತೆಪ್ಪಗೆ ಕೂತಿದ್ದಾರೆ ಶಾಸಕರು?

ಬರಲಿದ್ದಾರೆ ಇಂದು ಬರ್ಬರರು.
ಬಂದ ಮೇಲೆ
ತಮ್ಮ ಶಾಸನಗಳ ತಾವೇ ರಚಿಸುವರು.

ಚಕ್ರವರ್ತಿಯೇಕೆ ಎದ್ದಿದ್ದಾನೆ ಇಷ್ಟು ಬೇಗ?
ಕೂತಿದ್ದಾನೆ ನಗರದ ಮಹಾದ್ವಾರದಲ್ಲಿ
ಸಿಂಹಾಸನದ ಮೇಲೆ
ಮುಕುಟ ಪೀತಾಂಬರಧಾರಿಯಾಗಿ?

ಬರಲಿದ್ದಾರೆ ಇಂದು ಬರ್ಬರರು.
ಕಾದಿದ್ದಾನೆ ಚಕ್ರವರ್ತಿ
ಅವರ ಮುಖಂಡನನ್ನು ಸ್ವಾಗತಿಸಲು,
ಸತ್ಕರಿಸಲು
ಬಿನ್ನವತ್ತಳೆ ಬಿರುದು ಬಾವಲಿ ನೀಡಿ.
ಸಿಂಗಾರಗೊಂಡು ಹೊರಟಿದ್ದಾರೇಕೆ
ನಮ್ಮ ದಂಡಾಧಿಕಾರಿ ದ್ವಯರು
ರಂಗು ರಂಗು ಚಿತ್ತಾರಗಳ
ಉತ್ತರೀಯ ತೂಗಿ,
ಝಗಝಗ ನವ ರತ್ನ ಖಚಿತ
ಉಂಗುರ, ಕೈ ಕಡಗ, ಕವಚ,
ಭುಜ ಕೀರ್ತಿಗಳ ಮೆರೆದು?

ಬರಲಿದ್ದಾರೆ ಇಂದು ಬರ್ಬರರು
ಅವರ ಕಣ್ಣು ಕೋರೈಸುವುದು
ಇಂಥ ಒಡವೆ ತೊಡವು.

ನಮ್ಮ ಸನ್ಮಾನ್ಯ ವಾಗ್ಮಿಗಳೆಲ್ಲಿ ಪತ್ತೆಯಿಲ್ಲ
ತಮ್ಮ ಮಾಮೂಲು ಪರಾಕು ಮೊರೆಯಲು?

ಬರಲಿದ್ದಾರೆ ಇಂದು ಬರ್ಬರರು,
ಅವರಿಗೆ ಭೈರಿಗೆ ಎಂದರಾಗದು.

ಇದ್ದಕ್ಕಿದ್ದಂತೆ ಇದೇಕೆ ಚಡಪಡಿಕೆ, ಗೊಂದಲ?
ಜನರ ಮೋರೆಗಳೇಕೆ ಕಪ್ಪಿಟ್ಟಿವೆ?
ಹಾದಿ ಬೀದಿಗಳೆಲ್ಲ ಖಾಲಿಯಾಗುತ್ತಿವೆಯಲ್ಲ!
ಏಕೆ ಹಿಂತಿರುಗುತ್ತಿದ್ದಾರೆ ಮಂದಿ
ತಮ್ಮ ಮನೆಗಳಿಗೆ?

ಕತ್ತಲಿಳಿಯುತ್ತಿದೆ, ಬರ್ಬರರು ಬರಲಿಲ್ಲ,
ಸುದ್ದಿ ಬಂದಿದೆ ನಮ್ಮ ಗಡಿಗಳಿಂದ
ಎಲ್ಲೂ
ಇಂದು ಬರ್ಬರರೇ ಇಲ್ಲವೆಂದು.

ಬರ್ಬರರೇ ಇಲ್ಲವೇ? ಅಯ್ಯೋ
ಇನ್ನೇನು ನಮ್ಮ ಗತಿ?
ಅವರಾದರೂ ಪರಿಹಾರದಂತಿದ್ದರು ನಮಗೆ
ಒಂದು ರೀತಿ!!

Monday, September 25, 2006

ಆಃ

ಶ್ರೀ ಶ್ರೀ
[ತೆಲುಗು]

ಬೆಂಕಿಯುಗುಳುತಾ
ಆಕಾಶಕ್ಕೆ ನಾ ಹಾರಿಹೋದರೆ
ಅತ್ಯಾಶ್ಚರ್ಯದಿಂದ ಇವರು....

ರಕ್ತಕಕ್ಕುತಾ
ನೆಲದೆಡೆಗೆ ನಾನುರುಳಿಹೋದರೆ
ನಿರ್ದಾಕ್ಷಿಣ್ಯವಾಗಿ ಇವರೇ.....




Sunday, September 24, 2006

ಆ ದಿನ

ವರವರರಾವು
[ತೆಲುಗು]

ಹೇಳದೇ ಬಂದೆನೆಂದಲ್ಲ,
ಹೇಳಬೇಕಾದ್ದು ಎಂದಿಗೂ ಉಳಿದಿರುತ್ತದೆ
ಊಹಿಸದೇ ನಡೆದದ್ದು ಎಂದೂ ಅಲ್ಲ
ಊಹಿಸಿದ್ದು ನನ್ನನುಕೂಲಕ್ಕೇ ನಡೆವುದೆಂದು
ಯಾವಾಗಲೂ ಏನೋ ಒಂದು ಆಸೆ
ಯಾವ ವಾಕ್ಯವೂ ಅರ್ಧಕ್ಕೆ ನಿಂತಿಲ್ಲ
ಯಾವ ಕೆಲಸವೂ ನಿಂತುಹೋಗಿಲ್ಲ
ಯಾವ ಅನುಭವವೂ ಅರ್ಧಕ್ಕೇ.....

ಸಮಸ್ಯೆ ಅದಲ್ಲವೇ ಅಲ್ಲ
ಅಲ್ಲಿ ಕಾಲ ನಿಲ್ಲಲಿಲ್ಲ
ಕಾಲ ಮನವ ತೆರೆದಿಟ್ಟಿತು
ಅಷ್ಟೇ

ಸಿಹಿಕಹಿಗಳ
ಭೇದವನಳಿಸಿಹಾಕಲು
ನಾವು ದಿನದಿನವೂ ನಿದ್ರೆ ಕೆಡಿಸಿಕೊಂಡೆವು
ಗುಬ್ಬಿಗೂಡಲಿ, ರೆಕ್ಕೆಗಳಲಿ
ಹುದುಗಿದ ಇಪ್ಪತ್ತು ಹೇಮಂತಗಳ
ಉಗುರುಬಚ್ಚನೆ ಅನುಭವ
ಒಂದು ಕಹಿವಾಸ್ತವದಲ್ಲಿ ಕರಗಿ...
ನಾಳೇಯೇ ಹೊರಡಬೇಕೇ ಎಂದೆನ್ನುವಷ್ಟರಲ್ಲಿ
ಬೆಳಗಿಗಾಗಲೇ ನಾಳೆ ಇಂದಾಗಿದೆ.

ಅರೇ ಆಗಲೇ ಕರೆದೊಯ್ಯುವಿರಾ
ಎಂದು ನೀನಾತಂಕಪಡುವಾಗ
ನಿನ್ನ ಕಣ್ಣೆದುರಿಗೇ
ನನ್ನ ಕೈಗಳಿಗೆ ಬೇಡಿ

ದೃಶ್ಯವನು
ಲಘುದೀರ್ಘ ಚತುರತೆಯಲಿ
ಕತ್ತರಿಸಿದ "ಜಾಲೀ ಮುಲಾಕಾತ್" ನಿಂದ
ನಿಂತುಬಿಟ್ಟ ಮಾತು
ಕಣ್ಣ ಮೀರಿದ ಹನಿಯಾಗಿ
ಕಂಡರೆ ಕರುಣೆಯಿಂದ ಕಾಣುವೆ
ಎಸ್ಕಾರ್ಟ್ ವ್ಯಾನ್ ಗುರ್ರೆನ್ನುವುದು
ಧೂಳೆಬ್ಬಿಸುವುದು
ವಾಸನೆ ಅಡರುವುದು
ನೋಟ ಒಳಕ್ಕಿಟ್ಟುಕೊಂಡರೆ
ಖಾಕಿ ಬಟ್ಟೆಗಳೂ, ರೈಫಲ್‌ಗಳೂ
ನೋಡುತ್ತಿರುತ್ತವೆ.
ಮನಸು ಛಿಲ್ಲೆನ್ನುವುದು
ಸಿಟ್ಟಾಗುವುದು
ಪೆಟ್ರೋಲ್ ವಾಸನೆಯಲಿ
ಹೊಟ್ಟೆಯೊಳಗಿನ ನರ ಮೌನವಾಗಿ ಕನಲುವುದು
ನಿಮ್ಮಿಂದ ಬಂದ ಹೊರಪ್ರಪಂಚದ
ನೋಟವ
ಒಳ ಪ್ರಪಂಚದೊಳಗಣ ನಿಮ್ಮೊಳಕ್ಕೆ ತಿರುಗಿಸುವೆ.

ಕಾಲಕ್ಕೂ ನನಗೂ ಎರಡೇ ಕಾಲು
ಹಗಲು - ರಾತ್ರೆ
ಸ್ವಲ್ಪ ಬೇಗ ನಡೆಯ ಬೇಕೆಂಬ ಆಸೆಯಲಿ
ಕಾಲ ಸೆಕೆಂಡುಗಳ ಏದುಸಿರು ಹಿಡಿದು
ನಾನು ಲೇಖನಿ ಹಿಡಿದು
ಸಾಗುತ್ತಲೇ ಇರುತ್ತೇವೆ
ಸಾಗಿಸುತ್ತಲೇ ಇರುತ್ತೇವೆ

ಶತ್ರುವಿಗೆ ನಾಲ್ಕು ಕಂಗಳಿವೆ
ಟೆಲಿಕಿವಿ, ಟೆಲಿದೃಷ್ಟಿ, ವಯರ್‌ಲೆಸ್‌ ಬಾಯಿದೆ
ಆಯುಧಗಳ ಕೈಗಳಿವೆ
ಎಲ್ಲಕ್ಕಿಂತ
ತಾನೊಬ್ಬನೇ ಬದುಕಬೇಕೆಂಬ ಮಹದಾಸೆಯಿದೆ
ಅದಕ್ಕೆಂದೇ
ಹೃದಯವನ್ನ ಕೊಂದ
ಅದಕ್ಕೆಂದೇ ಹೃದಯ ಸ್ಪಂದನವ ಕೊಂದ--
ಹೃದಯವಿಲ್ಲದವರಲ್ಲಿ
ಯಾವ ಭಾಷೆ ಆಡುವುದು!

ಬೇಟೆ ನಾಯಿ ಜೋತಾಡುವು ನಾಲಿಗೆ,
ಕತ್ತಿನ ಬೆಲ್ಟು
ಧುಮುಗುಡುವ ಮಾಲೀಕನ ಕೈಲಿರುವ ಹಂಟರ್
ಎಲ್ಲವೂ ತನ್ನ ಅಂತಸ್ತೆಂದುಕೊಳ್ಳುವುದು
ಭಾವಕ್ಕೆ ಸಂಕೋಲೆ ಹಾಕುವುದು - ಅಪರಾಧವೆಂದು
ಯಾವ ಭಾಷೆಯಲಿ ಹೇಳುವುದು?

ಆಸ್ತಿ
ಮಾನವ ಪ್ರಪಂಚವನ್ನು
ಕಾವಲುಗಾರರಾಗಿ, ಅಪರಾಧಿಗಳಾಗಿ ಹಂಚಿಬಿಟ್ಟಿತು
ನಾನು ಆ ಅದನ್ನೇ ತೆಗೆದುಹಾಕುತ್ತೇನೆಂದರೆ
ಆ ಆಸ್ತಿಯ ಕಟಕಟಯಲಿ ಅಪರಾಧಿಯಾಗಿ
ಕಾಮಾಲೆ ಕಂಗಳಿಗೆ ಕಮ್ಯುನಿಸ್ಟನಂತೆ
ಅದಕ್ಕಿಂತ ದೊಡ್ಡ ಆರೋಪವೇ ಇಲ್ಲವಂತೆ
ಆತ ನನ್ನನ್ನು ನಕ್ಸಲೈಟ್ ಎನ್ನುವನು

ಅದೇ ಸತ್ಯವಾಗುವಂತೆ ನಾವು ನಿರೀಕ್ಷಿಸೋಣ
ಜನಕ್ಕಾಗಿ ನಾವು "ರಾಜದ್ರೋಹ" ಎಸಗೋಣ


any forcible separation from loved ones is of course very painful. But even worse is the sense of utter helplessness. There is nothing we can do about it. Such a person feels that there was something unsaid, a sentence cut in the middle, a melody abruptly stopped. It now feels as if even a minute's re-union would enable the undaid to be said, the sentence or the melody completed. If only... if.... if...
Ngugi [Detained: A Writer's Prison Dairy]